ಎಸ್ ಟು ಎಂಟರ್ಟೈನ್ಮೆಂಟ್ ನಿರ್ಮಾಣ ಸಂಸ್ಥೆಯಡಿಯಲ್ಲಿ ಈ ಹಿಂದೆ "ಅಕಿರ" ಚಿತ್ರ ನಿರ್ಮಿಸಿದ್ದ ಸೋಮಶೇಖರ್ ರೆಡ್ಡಿ ಮರಸೂರು, ಚೇತನ್ ಕುಮಾರ್ ಮತ್ತು ಶ್ರೀಕಾಂತ್ ಪ್ರಸನ್ನ ಈಗ ಮತ್ತೊಂದು ಸಿನಿಮಾ ಆರಂಭಿಸಿದ್ದಾರೆ. ಈ ಚಿತ್ರ ನಿರ್ದೇಶನದ ಹೊಣೆಯನ್ನು ಯಶ್ ಅಭಿನಯದ "ಲಕ್ಕಿ" ಸಿನೆಮಾ ನಿರ್ದೇಶಿಸಿದ ಡಾ||ಸೂರಿ ವಹಿಸಿಕೊಂಡಿದ್ದಾರೆ. ಚಿತ್ರಕ್ಕೆ "ಮಾಂಜಾ" ಎಂದು ಶೀರ್ಷಿಕೆ ಇಟ್ಟಿದ್ದು, ನಾಯಕ ನಟನಾಗಿ ಅನೀಶ್ ಹಾಗು ನಾಯಕಿಯಾಗಿ ದೀಪಾ ಸನ್ನಿಧಿ ಅಭಿನಯಿಸುತ್ತಿದ್ದಾರೆ. ರವಿಶಂಕರ್, ರಂಗಾಯಣ ರಘು, ಚಿಕ್ಕಣ್ಣ, ಸಾಧು ಕೋಕಿಲ, ಅಚ್ಯುತ್ ಕುಮಾರ್, ಅವಿನಾಶ್ ಮುಂತಾದ ನಟರು ಮುಖ್ಯ ಭೂಮಿಕೆಯಲ್ಲಿ ನಟಿಸುತ್ತಿದ್ದು, ಅಜನೀಶ್ ಲೋಕನಾಥ್ ಸಂಗೀತ ಸಂಯೋಜನೆ, ರಸೂಲ್ ಎಲ್ಲೋರ್ (ತೆಲುಗಿನ "ಜಲ್ಸಾ", "ಕಿಕ್", "ಊಸರವಳ್ಳಿ" ಖ್ಯಾತಿ) ಛಾಯಾಗ್ರಹಣ ಮಾಡುತ್ತಿದ್ದು, ಕೆ.ಎಂ. ಪ್ರಕಾಶ್ ಸಂಕಲನ ಮತ್ತು ರವಿವರ್ಮ ಸಾಹಸ ನಿರ್ದೇಶನ ಮಾಡುತ್ತಿದ್ದಾರೆ. ನವೆಂಬರ್ನಿಂದ ಚಿತ್ರೀಕರಣ ಪ್ರಾರಂಭವಾಗಲಿದ್ದು, ಚಿತ್ರೀಕರಣ ಬೆಂಗಳೂರು ಹಾಗು ಮುಂಬೈನಲ್ಲಿ ನಡೆಯಲಿದೆ.
ಇತ್ತೀಚೆಗೆ ಈ ಚಿತ್ರದ ಮುಹೂರ್ತ ಕೂಡಾ ನೆರವೇರಿದ್ದು, ನಾಯಕನಟ ಯಶ್ ಮೊದಲ ದೃಶ್ಯಕ ಆರಂಭ ಫಲಕ ತೋರಿದ್ದಾರೆ. ಈ ಸಂದರ್ಭದಲ್ಲಿ ಚಿತ್ರತಂಡದ ಎಲ್ಲ ಸದಸ್ಯರೊಂದಿಗೆ, ಚಿತ್ರರಂಗದ ಅನೇಕ ಗಣ್ಯರು ಆಗಮಿಸಿ ‘ಮಾಂಜಾ’ ಚಿತ್ರತಂಡಕ್ಕೆ ಶುಭ ಕೋರಿದರು.